ಚಿಂದೋಡಿ ಲೀಲಾ
	1941-. ಸುಮಾರು ಎಂಟು ದಶಕಗಳ ಇತಿಹಾಸವುಳ್ಳ ಕನ್ನಡ ವೃತ್ತಿ ನಾಟಕಮಂಡಲಿಯ ಒಡತಿ. ಶತಮಾನೋತ್ಸವ, ಸಹಸ್ರಮಾನೋತ್ಸವಗಳನ್ನಾಚರಿಸಿದ ನಾಟಕಗಳ ಪ್ರಧಾನ ಅಭಿನೇತ್ರಿ. ಕನ್ನಡವೃತ್ತಿರಂಗ ಭೂಮಿಯಲ್ಲಿ ಇನ್ನೂ ಸರಿಗಟ್ಟಲಾಗದ ದಾಖಲೆಗಳನ್ನು ಸ್ಥಾಪಿಸಿದ ಸಾಹಸಿ. ಜನ್ಮ ದಾವಣಗೆರೆಯಲ್ಲಿ 1941ರಲ್ಲಿ. ತಂದೆ ಚಿಂದೋಡಿ ವೀರಪ್ಪ. ಪ್ರಖ್ಯಾತ ಗಾಯಕರು, ನಟರು. ತಾಯಿ ಶಾಂತಮ್ಮ ಗೃಹಿಣಿ. ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ಶ್ರೀಗುರು ಕರಿಬಸವ ರಾಜೇಂದ್ರ ನಾಟಕಮಂಡಲಿ (ಕೆ.ಬಿ.ಆರ್. ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು. ಮೈಸೂರಿನ ಅರಸರಾದ ಕೃಷ್ಣರಾಜ ಒಡೆಯರು ವೀರಪ್ಪನವರ ಅಭಿನಯ ಗಾಯನವನ್ನು ಮೆಚ್ಚಿ `ಗಾಯನ ಗಂಧರ್ವ ಎಂಬ ಬಿರುದು, ಚಿನ್ನದ ತೋಡಾ ನೀಡಿ ಗೌರವಿಸಿದ್ದರು. `ಚಿನ್ನದ ತೋಡಾ ತೊಟ್ಟ ವೀರಪ್ಪ, ಚಿಂದೋಡಿ ವೀರಪ್ಪನಾಗಿ ಪ್ರಸಿದ್ಧರು. `ಚಿಂದೋಡಿ ಮನೆತನದ ಹೆಸರಾಗಿ ಬಳಕೆಗೆ ಬಂತು.

	ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. `ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲಸಿದ್ಧರಾಮನ ಪಾತ್ರ. ಬಾಲನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲ; ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿ `ಹಳ್ಳಿಹುಡುಗಿ' ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ. ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಂಡಿಲ್ಲ.

	1960-1975ರವರೆಗಿನ ಅವಧಿಯಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿ ಗುಣಸಾಗರಿ, ಲಂಕಾದಹನ, ಚಿತ್ರಾಂಗದ, ಶಾಕುಂತಲ, ಹಳ್ಳಿಹುಡುಗಿ ಮೊದಲಾದ ನಾಟಕಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಪ್ರದರ್ಶನಗಳನ್ನು ನೀಡಿತ್ತು. ಆದರೆ ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು, ಚಿಂದೋಡಿ ಲೀಲಾ ಪಾತ್ರ - `ಹಳ್ಳಿ ಹುಡುಗಿ' ಪಾತ್ರ ಕರ್ನಾಟಕದಲ್ಲಿ ಆ ಪಾತ್ರ ಮನೆ ಮಾತಾಯಿತು. ಲೀಲಾ ಅವರನ್ನು `ಹಳ್ಳಿ ಹುಡುಗಿ' ಎಂದೇ ಅಭಿಮಾನಿ ಪ್ರೇಕ್ಷಕರು ಗುರುತಿಸುತ್ತಿದ್ದರು.

	ಗಡಿನಾಡಿನಲ್ಲಿ ಕನ್ನಡದ ಜಯಭೇರಿ ಬಾರಿಸುವ ಬಯಕೆ, ಬೆಳಗಾವಿಯಲ್ಲಿ ಕ್ಯಾಂಪ್. ಅಭಿನಯಿಸಿದ ನಾಟಕಗಳೆಲ್ಲಾ ಶತದಿನೋತ್ಸವ ಆಚರಿಸಿದವು. ಗಡಿಭಾಗದಲ್ಲಿ 2000 ಕನ್ನಡ ನಾಟಕಗಳ ಪ್ರದರ್ಶನ ನೀಡಿದ್ದಕ್ಕಾಗಿ ಕರ್ನಾಟಕ ರಾಜ್ಯಪಾಲ ಎ.ಎನ್ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ವಿಶೇಷ ಉತ್ಸವವೇ ನಡೆಯಿತು. ಗಡಿನಾಡಿನಲ್ಲಿ ನಡೆಸಿದ ಕಲಾಸೇವೆ ಮೆಚ್ಚಿ ಸರ್ಕಾರ ತಾತ್ಕಾಲಿಕ ರಂಗಮಂದಿರ ನಿರ್ಮಿಸಿದ್ದ ಜಮೀನನ್ನೇ 30 ವರ್ಷಗಳ ಗುತ್ತಿಗೆಗೆ ನೀಡಿತು. ಅಲ್ಲಿ ಈಗ `ಚಿಂದೋಡಿ ಲೀಲಾ ರಂಗಮಂದಿರ ನಿರ್ಮಾಣವಾಗಿದೆ. ಬೆಳಗಾವಿಯ ಉತ್ತರಭಾಗದ ಜನರಿಗೆ ಅನುಕೂಲವಾಗಲೆಂದು, ಸದಾಶಿವನಗರದಲ್ಲಿ ಕೆ.ಬಿ.ಆರ್. ಕನ್ನಡ ಸಂಸ್ಕøತಿ ಕೇಂದ್ರ ರಂಗಮಂದಿರ ನಿರ್ಮಿಸಿದ್ದಾರೆ.

	1950-60ರ ದಶಕದ ನಂತರ ಹಿರಣ್ಣಯ್ಯ ಮಿತ್ರಮಂಡಲಿಯಂತಹ ಸಂಸ್ಥೆಗಳನ್ನು ಬಿಟ್ಟರೆ, ವೃತ್ತಿಪರ ನಾಟಕ ಸಂಸ್ಥೆಗಳ ಚಟುವಟಿಕೆ ಬೆಂಗಳೂರಿನಲ್ಲಿ ಕಂಡುಬರುತ್ತಿರಲಿಲ್ಲ. ಚಿಂದೋಡಿ ಲೀಲಾ ಬೆಂಗಳೂರಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು 1995ರ ಅಕ್ಟೋಬರ್‍ನಲ್ಲಿ ಬಂದರು. ಬೆಂಗಳೂರಿನ ಹೃದಯಭಾಗದಲ್ಲಿರುವ ಗುಬ್ಬಿ ವೀರಣ್ಣ ಚಿತ್ರಮಂದಿರದಲ್ಲಿ ಆರಂಭವಾದ `ಪೊಲೀಸನ ಮಗಳು ನಾಟಕ, ಸತತ ಮೂರು ವರ್ಷಗಳು ನಡೆಯಿತು. ದಿನಕ್ಕೆರಡು ಪ್ರದರ್ಶನ. ಒಂದೇ ನಾಟಕ, ಒಂದೇ ತಂಡದಿಂದ. ದಿನಕ್ಕೆ ಎರಡು ಮೂರು ಪ್ರದರ್ಶನದಂತೆ ನಿರಂತರವಾಗಿ 1135 ಪ್ರದರ್ಶನಗಳಾದವು. ಈ ಯಶಸ್ಸಿನ ಕೇಂದ್ರಬಿಂದು ಪ್ರಧಾನ ಪಾತ್ರಧಾರಿ ಚಿಂದೋಡಿ ಲೀಲಾ.

	ಬೆಂಗಳೂರಿನಲ್ಲಿ ಅಪೂರ್ವ ಯಶ ಸಾಧಿಸಿದ `ಪೊಲೀಸನ ಮಗಳು ಕರ್ನಾಟಕದ ಎಲ್ಲೆಡೆ ಪ್ರದರ್ಶಿತವಾಗಿದೆ. ಒಟ್ಟು 3340 ಪ್ರದರ್ಶನ ಕಂಡ ನಾಟಕ, ಗಿನ್ನೆಸ್ ದಾಖಲೆಗೆ ಸೇರಲಿರುವ ವೃತ್ತಿ ನಾಟಕ ಸಂಸ್ಥೆಯ ನಾಟಕ.
	ಚಿಂದೋಡಿ ಲೀಲಾ ಪ್ರಧಾನ ಭೂಮಿಕೆಯಲ್ಲಿರುವ ಇನ್ನೊಂದು ನಾಟಕ `ಧರ್ಮದ ದೌರ್ಜನ್ಯ ಅನೇಕ ಊರುಗಳಲ್ಲಿ  ಶತದಿನೋತ್ಸವ ಪ್ರದರ್ಶನಗೊಂಡ ನಾಟಕ. ಈ ನಾಟಕದಲ್ಲಿ ಚಿಂದೋಡಿ ಲೀಲಾ ಪೊಲೀಸ್ ಸೂಪರಿಂಟೆಂಡ್ `ಜ್ಯೋತಿ' ಯಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯಂತೆಯೇ ಪ್ರಸಿದ್ಧವಾದ ಪಾತ್ರ. ಶಾಕುಂತಲ, ಚಿತ್ರಾಂಗದ, ಲಂಕಾದಹನ, ಮಹರಾವಣ, ಸಿಂಡಿಕೇಟ್-ಇಂಡಿಕೇಟ್, ಬ್ರಹ್ಮಚಾರಿಯ ಮಗ-ಇವು ಚಿಂದೋಡಿ ಲೀಲಾ ಅಭಿನಯದ ನಾಟಕಗಳು-ಜನಪ್ರಿಯ ನಾಟಕಗಳು.

	ಚಿಂದೋಡಿ ವೀರಪ್ಪ 1928ರಲ್ಲಿ ಸ್ಥಾಪಿಸಿದ ಕೆ.ಬಿ.ಆರ್. ಡ್ರಾಮಾ ಕಂಪನಿ, ಇಂದಿಗೂ ಜೀವಂತ. ಕುಟುಂಬದ ಮೊದಲ `ಬಂಗಾರ ತೋಡಾಧಾರಿಯಾದ ವೀರಪ್ಪ ನಿಧನಾನಂತರ, ಅವರ ಹಿರಿಯ ಮಗ ಚಿಂದೋಡಿ ವೀರಪ್ಪ ನೇತೃತ್ವದಲ್ಲಿ ಕಂಪನಿ ಮುಂದುವರೆಯಿತು. ಎರಡನೇ ವೀರಪ್ಪನವರ ನಿಧನಾನಂತರ, 1978ರಲ್ಲಿ ಕಂಪನಿ ಕುಟುಂಬದಲ್ಲಿ ಮೂರು ಕವಲಾಗಿ ಹಂಚಿಹೋಯಿತು. ಕೆಲಕಾಲಾನಂತರ ಆ ಮೂರು ಸಂಸ್ಥೆಗಳು ಚಿಂದೋಡಿ ಲೀಲಾ ನೇತೃತ್ವದಲ್ಲಿ ಮುನ್ನಡೆದವು. ಈಗ ಅವು ಮೂರು ಮತ್ತೆ ಒಂದಾಗಿವೆ; ಲೀಲಾ ಸಾರಥ್ಯದಲ್ಲಿ ಮುಂದುವರೆದಿವೆ. 	ಸಂಸ್ಥೆಯ ಕೇಂದ್ರಸ್ಥಾನವಾದ ದಾವಣಗೆರೆಯಲ್ಲಿ `ಚಿಂದೋಡಿ ಲೀಲಾ ಕಲಾಕ್ಷೇತ್ರ ನಿರ್ಮಾಣ ಕಾರ್ಯ ಆರಂಭವಾಗಿದೆ. ಆಧುನಿಕ ಉಪಕರಣಗಳಿಂದ ಕೂಡಿದ ಅತ್ಯಾಧುನಿಕ ರಂಗಮಂದಿರ ಸಿದ್ಧವಾಗುತ್ತಿದೆ.

	ಕನ್ನಡ ವೃತ್ತಿಪರ ನಾಟಕ ಸಂಸ್ಕøತಿ ಪರಿಚಯ ಕಾರ್ಯಕ್ರಮದ ಅಂಗವಾಗಿ `ಕಾಸರಗೋಡಿನಿಂದ ಕಾಶಿಯವರೆಗೆ ರಂಗಯಾತ್ರೆ ನಡೆಸಿದ್ದಾರೆ. ಈ ರಂಗಯಾತ್ರೆ ಕಾಲದಲ್ಲಿ ಅನೇಕ ನಗರಗಳಲ್ಲಿ ವಿಚಾರಸಂಕೀರ್ಣ ನಡೆಸಿ, ನಾಟಕಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ನೆರವಿನಿಂದ ಬ್ರಿಟನ್ ಮತ್ತಿತರ ದೇಶಗಳಿಗೆ ಹೋಗಿ ಅಲ್ಲಿ `ಕಿತ್ತೂರು ಚೆನ್ನಮ್ಮ `ಟಿಪ್ಪೂ ಸುಲ್ತಾನ್, `ಜಗಜ್ಯೋತಿ ಬಸವೇಶ್ವರ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

	ಚಿಂದೋಡಿ ಲೀಲಾ ಅವರಿಗೆ ಸರ್ಕಾರವಲ್ಲದೆ ಖಾಸಗಿ ಸಂಘ ಸಂಸ್ಥೆಗಳು, ಗುರುಮಠಗಳೂ ಸನ್ಮಾನಿಸಿವೆ. ಪ್ರಶಸ್ತಿಗಳನ್ನು ನೀಡಿವೆ. 	ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1994), ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (2003)-ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ ಈ ಕಲಾವಿದೆಗೆ ಕೇಂದ್ರ ಸರ್ಕಾರ `ಪದ್ಮಶ್ರೀ ಪ್ರಶಸ್ತಿ (1988) ನೀಡಿ ಗೌರವಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ (1987) ಅನಂತರ ಅಧ್ಯಕ್ಷೆಯಾಗಿ(1991) ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ.

	ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರೀಕ್ಷಿಸಿದ ಪ್ರೋತ್ಸಾಹ ದೊರೆಯದ ಕಾರಣ, ನಾಟಕರಂಗದಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಸೋದರಳಿಯ ಬಂಗಾರೇಶ್ (ಅಣ್ಣ ಚಿಂದೋಡಿ ವೀರಪ್ಪನ ಮಗ) ನಿರ್ದೇಶನದ ಚಿಂದೋಡಿ ಲೀಲಾ ನಿರ್ಮಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರಕ್ಕೆ  ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ದೊರಕಿರುವುದು ತೃಪ್ತಿ ತಂದಿದೆ. ಕರ್ನಾಟಕ ಸರಕಾರ ಗಾನಯೋಗಿ ಚಿತ್ರಕ್ಕೆ 1995-96ರ ಅತ್ಯುತ್ತಮ ಚಿತ್ರಪ್ರಶಸ್ತಿ (ನಿರ್ದೇಶಕ: ಚಿಂದೋಡಿ ಬಂಗಾರೇಶ್), ಅತ್ಯುತ್ತಮ  ಪೋಷಕ ನಟ ಪ್ರಶಸ್ತಿ (ಗಿರೀಶ್ ಕಾರ್ನಾಡ್), ಅತ್ಯುತ್ತಮ ಸಂಗೀತ ನಿರ್ದೇಶಕ (ಹಂಸಲೇಖ) ನೀಡಿ ಗೌರವಿಸಿದೆ. 
											(ರಾಮಕೃಷ್ಣ ಮರಾಠೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ